ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಾಗಿ ಚರ್ಚೆ ನಡೆಯುವ ವಿಷಯಗಳಲ್ಲಿ ರಾಜಕೀಯ ವಿಷಯವು ಒಂದು. ಸ್ನೇಹಿತರೂ ಕೂಡ ಯಾವುದೊ ಒಂದು ಪಕ್ಷದ ಪರವಾಗಿ ಮಾತನಾಡುತ್ತ ಜಗಳ ಆಡಿಕೊಳ್ಳುವುದನ್ನು ಕೂಡ ನೋಡುತ್ತೇವೆ. ಅನೇಕರು ಆ ಪಕ್ಷದ ಪರವಾಗಿ ಯಾರೋ ಒಬ್ಬ ವ್ಯಕ್ತಿಯಿಂದ ಪ್ರೇರಿತರಾಗಿ ಆ ಪಕ್ಷದ ಪರವಾಗಿ ಮಾತನಾಡುತ್ತರೆಯೇ ವಿನಃ , ಪಕ್ಷದ ಹುಟ್ಟು, ನಡೆದು ಬಂದ ಹಾದಿ, ಸಿದ್ದಾಂತಗಳಿಗಾಗಿ ಖಂಡಿತ ಅಲ್ಲ. ಮುಖ್ಯ ಕಾರಣ ಅವರು ಮೆಚ್ಚುವ ಒಬ್ಬ ವ್ಯಕ್ತಿ ಆ ಪಕ್ಷದಲ್ಲಿ ಇರುವುದು ಅಥವಾ ಅವರಿಂದ ಇವರಿಗೆ ಏನೋ ಅನುಕೂಲವಾಗಿರತ್ತೆ. ಒಬ್ಬ ವ್ಯಕ್ತಿ ಮತ್ತು ಆ ವ್ಯಕ್ತಿಯ ಮಾತುಗಳಿಂದ ನಾವು ಪ್ರೇರಿತರಾಗುತ್ತೀವೀ ಅಂದರೆ ಆವನು ಆಡುವ ಮಾತುಗಳು ನಾವು ಇಷ್ಟಪಡುವ ಅಥವಾ ನಾವು ಬಯಸುವ ವಿಷಯದ ಪರವಾಗಿ ಇದೆ ಅಂತ ಅರ್ಥ. ಕೆಲವೊಮ್ಮೆ ಸರಿಯಾಗಿ ಯೋಚಿಸದೆ ನಾವು ಅನುಸರಿಸುವ ವ್ಯಕ್ತಿ ಇಷ್ಟ ಯಾರೊನ್ನೊ ಇಷ್ಟ ಪಡುತ್ತಾರೆಂದು ನಾವು ಅವರನ್ನು ಇಷ್ಟ ಪಡುತ್ತೀವಿ. ತುಂಬ ಸಲ ಪೂರ್ವಾಪರ ಯೋಚಿಸದೆ ಕೆಲವು ವ್ಯಕ್ತಿಗಳನ್ನು ಅಟ್ಟಕೇರಿಸಿ ಅವರನ್ನು ನಮ್ಮ ಆದರ್ಶ ವ್ಯಕ್ತಿಯನ್ನಾಗಿಸಿ ಬಿಡುತ್ತೀವಿ.
ಯಾವುದೊ ಒಂದು ರಾಜಕೀಯ ಪಕ್ಷದ ಪರವಾಗಿ ಮಾತನಾಡುವವರ ಹತ್ತಿರ ನಿಮ್ಮ ರಾಜಕೀಯ ಪಕ್ಷದ ಸಿದ್ದಾಂತಗಳೇನು ಅಂತ ಕೇಳಿ ನೋಡಿ. ಅವರು ಆ ಪಕ್ಷದ ಸಿದ್ದಾಂತಗಳನ್ನು ಹೇಳುವುದಕ್ಕೆ ತಡಕಾಡುತ್ತಾರೆ. ಯಾಕಂದರೆ ಅವರು ಪಕ್ಷದ ಪರವಾಗಿ ಅಲ್ಲ ಒಬ್ಬ ವ್ಯಕ್ತಿಯ ಪರವಾಗಿ ಕೆಲಸ ಮಾಡುತ್ತಾ ಇರುತ್ತಾರೆ. ಅವರಿಗೆ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆಯೇ ಜಾಸ್ತಿ ಆಗಿರುತ್ತದೆ. ಹಿಂದೆಯೂ ನಾವು ಅನೇಕ ರಾಜಕಾರಣಿಗಳನ್ನು ತನ್ನ ಅನುಕೂಲ, ಸ್ವಾರ್ಥ ಮತ್ತು ಲಾಭಕೋಸ್ಕರ ಪಕ್ಷಗಳನ್ನು ಬದಲಾಯಿಸುವುದನ್ನು ನೋಡಿದ್ದೇವೆ. ಅದು ಇವತ್ತಿಗೂ ಮುಂದುವರೆಯುತ್ತಾ ಬಂದಿದೆ. ಒಂದು ರಾಜಕೀಯ ಪಕ್ಷದಲ್ಲಿದ್ದ ಒಬ್ಬ ಮುಖಂಡ ತನ್ನ ಸ್ವಾರ್ಥಗೋಸ್ಕರ ಇನ್ನೊಂದು ಪಕ್ಷಕ್ಕೆ ಹಾರಿದಾಗ ಅವನ ಹಿಂಬಾಲಕರೆಲ್ಲ ಅವನ ಹಿಂದೆ ತಾವು ಅದೇ ಪಕ್ಷಕ್ಕೆ ಹಾರುತ್ತಾರಲ್ಲ ಅದು ವ್ಯಕ್ತಿ ನಿಷ್ಟಯೇ ಹೊರತು ಖಂಡಿತ ಪಕ್ಷದ ನಿಷ್ಠೆಯಂತೂ ಅಲ್ಲ.
ಕೇವಲ ಬೆರಳೆಣಿಕೆಯಷ್ಟು ಜನ ಪಕ್ಷದ ನಿಷ್ಠೆ ಬಿಡುವುದಿಲ್ಲ ಯಾಕಂದ್ರೆ ಅವರು ಸಿದ್ದಾಂತಗಳನ್ನು ನಂಬಿ ಅದರ ಪರವಾಗಿ ಕೆಲಸ ಮಾಡುವವರು. ಇಂತವರು ಯಾರು ಬರಲಿ ಅಥವಾ ಹೋಗಲಿ ತಮ್ಮ ಸಿದ್ದಾಂತಗಳನ್ನು ಇಂದಿಗೂ ಬದಲಿಸುವುದಿಲ್ಲ. ಹಾಗಾಗಿ ಎಷ್ಟೇ ವರುಷಗಳಾದರು ಒಂದೇ ಪಕ್ಷದಲ್ಲಿ ಆ ಪಕ್ಷದ ಸಿದ್ದಾಂತಗಳಿಗೆ ಕಟ್ಟುಬಿದ್ದು ಕೆಲಸ ಮಾಡುತ್ತಾ ಇದ್ದು ಬಿಡುತ್ತಾರೆ.
ರಾಜಕೀಯ ಮುಖಂಡರು ಒಂದು ಪಕ್ಷದಲ್ಲಿದ್ದು ಇನ್ನೊಂದು ಪಕ್ಷವನ್ನು ವಾಮಾಗೋಚರವಾಗಿ ಬೈದು, ರಾಜಕೀಯ ಲಾಭದ ಅವಕಾಶ ಸಿಕ್ಕಾಗ ಅದೇ ಪಕ್ಷಕ್ಕೆ ಹಾರಿ ಮೊದಲು ಇದ್ದ ಪಕ್ಷವನ್ನು ಈ ಪಕ್ಷವನ್ನು ಬೈಯುತ್ತಿದ್ದ ಹಾಗೇನೇ ಬೈಯುವದನ್ನು ನೋಡುತ್ತಲೇ ಇದ್ದಿವಿ. ಅವರ ಹಿಂಬಾಲಕರು ಕೂಡ ಪಕ್ಷ ಬದಲಾಯಿಸಿ ಸ್ನೇಹಿತರನ್ನು ಶತ್ರುಗಳಾಗಿ, ಶತ್ರುಗಳನ್ನು ಸ್ನೇಹಿತರನ್ನಾಗಿ ಬದಲಾಯಿಸಿಕೊಂಡು ಬಿಡುತ್ತಾರೆ. ಅವರಿಗೆ ಗೊತ್ತಿಲ್ಲದ ವಿಷಯ ಅಂದರೆ ಅವರ ಮುಖಂಡನಿಗೆ ಅವನ ಸ್ವಾರ್ಥ ದೊಡ್ಡದಾಗಿ ಕಾಣುವಷ್ಟು ಅವರ ಹಿಂಬಾಲಕರ ಸಮಸ್ಯೆ ಕಾಣಿಸುವದಿಲ್ಲ ಎಂದು.
ರಾಜಕೀಯ ಮುಖಂಡರಿಗೆ ಬೇಕಾಗಿರುವುದು ಅವರ ಪರವಾಗಿ ಕೆಲಸ ಮಾಡಲು ಜನ ಬೇಕು ಅಷ್ಟೇ, ನಿಮ್ಮದು ಅದೇ ಕೆಲಸ, ಅದರಿಂದನೇ ನಿಮ್ಮ ಹೊಟ್ಟೆ ತುಂಬುತ್ತದೆ ಅಂದರೆ ತಕರಾರಿಲ್ಲ. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಆದರೆ ದೇಶ ಅಭಿವೃದ್ಧಿ ಬೇಕಾದರೆ ವ್ಯಕ್ತಿಗಳ ಪರ, ಪಕ್ಷಗಳ ಪರ ವಹಿಸುವದನ್ನು ಬಿಟ್ಟು ಅವರು ದೇಶದ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಾರೋ ಎಲ್ಲವೊ ಅಥವಾ ದೇಶವನ್ನು, ಜನರ ದುಡ್ಡು ನುಂಗುತ್ತಾರೋ ಎನ್ನುವ ಬಗ್ಗೆ ವಿಚಾರ ಮಾಡಿ ಪ್ರಶ್ನಿಸಿವುದನ್ನು ರೂಢಿಸಿಕೊಂಡರೆ ನಮ್ಮೆಲ್ಲ ಸಮಸ್ಯೆಗೆ ಪರಿಹಾರ ಸಿಗಬಹುದು. ಯಾಕೆಂದರೆ ಅವರ ಹಿಂದೆ ಜನ ಇದ್ದಾರೆ ಅನ್ನುವ ಧೈರ್ಯವೇ ಅವರಿಗೆ ತಾನೇ ಅವರು ಅಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಕೈ ಹಾಕುವುದು. ಅವರನ್ನು ನೇರವಾಗಿ ಅಥವಾ ಸಾಮಾಜಿಕ ಜಾಲ ತಾಣದಲ್ಲಿ ಪ್ರಶ್ನಿಸಿದರೆ ಮೊದಲು ಉತ್ತರ ಕೊಡುವವರು ಅವರ ಹಿಂಬಾಲಕರೇ ಹೊರತು ಅವರ ಮುಖಂಡರಲ್ಲ.
ಯಾವ ಮಟ್ಟಿಗೆ ಅಂದರೆ ರಾಜಕೀಯ ಮುಖಂಡರು ಭ್ರಷ್ಟರಾಗಿದ್ದರೂ ಅವರನ್ನು ಸಮರ್ಥಿಸಿಕೊಳ್ಳುತ್ತಾರಲ್ವಾ ಆದರ ಬಗ್ಗೆ ಬಹಳ ಆಶರ್ಯವಾಗುತ್ತದೆ. ಅಂದರೆ ಇವರಿಗೂ ಬೇಕಾಗಿರುವುದು ಅದೇ ಭ್ರಷ್ಟಾಚಾರ ಹೊರತು ದೇಶ ಅಭಿವೃದ್ಧಿ ಅಲ್ಲ. ತಮ್ಮ ಆತ್ಮಾಭಿಮಾನವನ್ನೇ ಕೊಂದುಕೊಂಡು ಒಬ್ಬರನ್ನು ಬೆಂಬಲಿಸುತ್ತಾರೆ ಅಂದ್ರೆ ಅದು ಬರಿ ವ್ಯಕ್ತಿ ನಿಷ್ಠೆ ಮಾತ್ರವೇನಾ ಅನ್ನುವುದು ಪ್ರಶ್ನೆ?
ಶ್ರೀ
ಥಿಂಕ್ ರೈಟ್
ಅಧಿಕಾರದ ಲಾಲಸೆಯಿಂದ ಇಂದಿನ ಬಹುತೇಕ ರಾಜಕಾರಣಿಗಳು, ತತ್ವ ಸಿದ್ದಾಂತ ಎಲ್ಲದ್ದಕ್ಕೂ ಎಳ್ಳು ನೀರು ಬಿಟ್ಟು ಎಷ್ಟೋ ದಿನಗಳಾಗಿವೆ. ಎಲ್ಲರೂ ಅನುಕೂಲ ಸಿಂಧುಗಳಾಗಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಪ್ರಜೆಗಳಿಗೆ ಯಾವುದೇ ಆಡಳಿತದಲ್ಲಿ ಯಾವುದೇ ರೀತಿಯ ವೆತ್ಯಾಸ ಕಾಣದಂತಾಗಿರುವುದು ದೌರ್ಭಾಗ್ಯವೇ ಸರಿ
ಏನಂತೀರೀ?
LikeLike